Thursday, 6 July 2017

"Heard melodies are sweet, but those unheard  are sweeter"
  
"ಅಮ್ಮಾ ತಾಯಿ .. ಅವನು ಬರೆದಿದ್ದು ಬಹಳಾ ಚೆನ್ನಾಗಿದೆ .. ಬರೀದೆ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು.. ನಮಗೆ ಈ ಪದ್ಯ ಉರು ಹೊಡೆಯೋ ಕಷ್ಟ ತಪ್ತಿತ್ತು.. ನಮ್ಮ ಕಷ್ಟ ನಮ್ಮದು .. ನಿಂಗೆ ದೊಡ್ಡ ನಮಸ್ಕಾರ "  ಕೀಟ್ಸ್ ಹೇಳಿದ ಮಾತನ್ನು ಉದಾಹರಣೆ ಕೊಡುತ್ತಲೇ ಅವರೆಲ್ಲ ಎಗರಿ ಬಿದ್ದರು . ನಾನು ಮತ್ತದೇ ಅಸಹಾಯಕತೆಯಲ್ಲಿ ಒದ್ದಾಡುತ್ತಿದ್ದೆ... ಅವರಿಗೆಲ್ಲಾ ಕೀಟ್ಸ್ ಏಕೆ ನಮಗೆ ಬೇಕು, ಕುಮಾರವ್ಯಾಸ ಹೇಗೆ ಅರಳಿಸಬಲ್ಲ, ಕಾವ್ಯ ಬದುಕಿಗೆ ಏಕೆ ಬೇಕು ... ಹೇಳಲಾಗದ ಹೇಳದೆ ಇರಲೂ ಆಗದ ಸಂಕಟ ... 
ನಸುಕಿಗೂ ಮುನ್ನ ಎದ್ದು ಬಾಗಿಲು ಸಾರಿಸಿ ರಂಗೋಲಿಯಿಟ್ಟು ಕೊಟ್ಟಿಗೆ ಕೆಲಸ, ಹೊಲದ ಸಣ್ಣಪುಟ್ಟ ಕೆಲಸ ಮುಗಿಸಿ ಸ್ನಾನ ಮಾಡಲೂ ಪುರುಸೊತ್ತಿಲ್ಲದೆ ಹಾಗೆಹಾಗೇ ಶಾಲೆಗೇ ಓಡಿಬರುತ್ತಿದ್ದವರು ಅವರು. ಪ್ರತಿನಿತ್ಯ ತಲೆ ಬಾಚಿಕೊಳ್ಳುತ್ತಿದ್ದವರೂ ಕಡಿಮೆ. ಒಂದಿಬ್ಬರು ಹುಟ್ಟಿದಾಗಿನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿಯೇ ಇಲ್ಲವೇನೋ ಎಂಬಂತೆಯೇ ಬರುತ್ತಿದ್ದರು. ಈ ಯಾವ ಅಂಶಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕೀಳರಿಮೆಯಿರಲೇ ಇಲ್ಲ. ಅವೆಲ್ಲವೂ ಅತ್ಯಂತ ಸಹಜವೆಂಬಂತೆ ಇರಬೇಕಾದ್ದೇ ಹಾಗೆಂಬಂತೆ ಇರುತ್ತಾ ನೀವು ದಿನಾ ಸ್ನಾನ ಮಾಡ್ತೀರಾ ಎಂದು ಆಶ್ಚರ್ಯ ಚಕಿತರಾಗಿ ಕೇಳುತ್ತಿದ್ದವರಿಗೆ ಕಾವ್ಯ ಏಕೆ ಬೇಕು ಎಂದು ನಾನು ಕಲಿಸಿಕೊಡಲು ಹೆಣಗುತ್ತಿದ್ದೆ. ಅವರೆಲ್ಲರಿಗೂ ಪ್ರತಿದಿನ ಗೇಲಿಯ ವಸ್ತುವಾಗಿದ್ದೆನೇನೋ ಎಂದು ಈಗ ಅನ್ನಿಸುತ್ತದೆ.

ಅವತ್ತೊಂದು ದಿನ ಎಂದಿನಂತೆ ಅಣ್ಣ ಪುಸ್ತಕವನ್ನು ಮುಂದಿಟ್ಟುಕೊಂಡು ಗದುಗಿನ ಭಾರತ ಓದುತ್ತಿದ್ದರು. ತಲ್ಲೀನಳಾಗಿದ್ದೆ ಎಂದಿನಂತೆ. ಹೊರಗಡೆ ಮಳೆ .. ಒಂದು ಕ್ಷಣ ಕಣ್ಣು ಕೋರೈಸುವಂತೆ ಮಿಂಚು .. ಮಿಂಚಿನ ಹಿಂದೆಯೇ ಕವಿದ ಕತ್ತಲು. ಕರೆಂಟು ಹೋಗಿತ್ತು. ಇನ್ನು ಮುಗಿಯಿತು ವಾಚನ ಎಂದುಕೊಳ್ಳುತ್ತಿದ್ದವಳನ್ನು ಚಕಿತಗೊಳಿಸಿದ್ದು ಅಣ್ಣನ ಮುಂದುವರಿದ ಗಮಕ ವಾಚನ. ಪುಸ್ತಕ ಇಲ್ಲದಿರುವುದು ಅವರಿಗೆ ಕೊರತೆಯೇ ಅಲ್ಲವೆಂದು  ಅವರು ಮುಂದಿನ ಅರ್ಧ ಗಂಟೆಯಲ್ಲಿ ನಿರೂಪಿಸಿಬಿಟ್ಟಿದ್ದರು. ಅವರಂತೆಯೇ ಪುಸ್ತಕ ನೋಡದೆ ಪದ್ಯಗಳನ್ನು ಓದುವ ಹಂಬಲ. ಕೇಳು ಜನಮೇಜಯ ಧರಿತ್ರೀಪಾಲ ಎಂಬುದು ಹುಟ್ಟಿದಾಗಿನಿಂದ ಕೇಳಿಕೊಂಡು ಬಂದಿದ್ದ ಶಬ್ದ ಗುಚ್ಛ . ಹೇಳಿಕೇಳಿ ಕುಮಾರವ್ಯಾಸ ರೂಪಕ ಚಕ್ರವರ್ತಿ. ಅವನು ಹಗೆಗಳ ಹಿಂಡಿದನು ಮನದೊಳಗೆ ಅಂದಾಗ ಪುಳಕ .. ಅಂತಹಾ ಪುಳಕಗಳ ಜೊತೆಜೊತೆಗೆ ಅಂಗಳದಲ್ಲಿ ಚಾಪೆ ಹಾಕಿ ಅಣ್ಣ ಹೇಳುತ್ತಿದ್ದ ಕಥೆಗಳನ್ನೆಲ್ಲಾ ಕೇಳುತ್ತಿದ್ದ ನಾನು ಅವೆಲ್ಲವನ್ನೂ ಮರುದಿನ ಶಾಲೆಯಲ್ಲಿ ಸಿಕ್ಕ ಗೆಳತಿಯರನ್ನು ಎದುರಿಗೆ ಕೂಡಿಸಿಕೊಂಡು ಅವರಿಗೆ ಒಪ್ಪಿಸುತ್ತಿದ್ದೆ. ಎಲ್ಲರಿಗೂ ಕಥೆ ಕೇಳುವ ಉತ್ಸಾಹವಿತ್ತೇ ಹೊರತು ಕಾವ್ಯದ ಕುರಿತು ಒಂದಿಷ್ಟೂ ಕುತೂಹಲವಿರಲಿಲ್ಲ. ಮಾತೆತ್ತಿದರೆ ಪದ್ಯಗಳ ಸಾಲುಗಳನ್ನು ಹೇಳುವುದು ಮೈಗೂಡಿ ಹೋಗಿತ್ತು.  
ಯಾಕೆ ಹಾಗಾಡುತ್ತಿದ್ದೆ ನಾನು.. ನನ್ನ ಪಾಂಡಿತ್ಯ ಪ್ರದರ್ಶನಕ್ಕಾ... ಅವರೂ ಕಾವ್ಯವನ್ನು ಆಸ್ವಾದಿಸಲಿ ಎಂದಾ .. ಅಥವಾ ಅವರಲ್ಲಿ ಬಹುತೇಕರು ಶ್ರಮಜೀವಿಗಳು.. ನಾನು ಓದುತ್ತಿರುವುದು ಅಪ್ರಯೋಜಕವಲ್ಲ ಎಂದು ಮನವರಿಕೆ ಮಾಡಿಕೊಡುವುದಕ್ಕಾ.. 
ಒಂದು ದಿನ ಹೀಗೆ ನನ್ನ ಕಾವ್ಯಾಟೋಪ ಮುಂದುವರೆದಿತ್ತು.. ಒಬ್ಬಳು ಏನೋ ನೆನಪಾದವಳಂತೆ ಒಂದು ಚೀಟಿ ತೆಗೆದು ಕೊಟ್ಟಳು.. ಅವಳು ಕೊಟ್ಟ ಚೀಟಿ ಓದಿದ ನನಗೆ ದೊಡ್ಡ ಶಾಕ್. ಚೆಂದದ ಪದ್ಯ . ಅದೇ ಶಾಲೆಯಲ್ಲೇ ನನ್ನಣ್ಣ ಇದ್ದಿದ್ದರಿಂದ ಅವರಿಗೆ ಅದನ್ನೊಪ್ಪಿಸಿ ತರಗತಿಗೆ ಹೋದೆವು. ಸಂಜೆ ಅವಳಣ್ಣ ನಮ್ಮನೆ ಮುಂದೆ ಹಾಜರ್. ಅಣ್ಣ ಕವನದ ಬಗ್ಗೆ ಹೊಗಳುತ್ತಿದ್ದರು. ಅವನು ಸಂಕೋಚದಿಂದಲೇ ತಲೆ ತಗ್ಗಿಸಿ ನಿಂತಿದ್ದ. ಅವನ ತಂದೆ ಹಿಂದಿನ ವರ್ಷವಷ್ಟೇ ಇಲ್ಲವಾಗಿದ್ದರು. ನಮ್ಮ ಮನೆಯ ಪಕ್ಕದ ತೋಟದಲ್ಲೇ ಕೆಲಸಕ್ಕೆ ಬರುತ್ತಿದ್ದ. ಬಿಡುವಿದ್ದಾಗ ನಾನು ಅವನ ತಂಗಿಗೆ ಕೊಟ್ಟಿದ್ದ  ನರಸಿಂಹ ಸ್ವಾಮಿ ಪದ್ಯಗಳನ್ನು ಓದುತ್ತಿದ್ದನಂತೆ. ಟಿ.ವಿ., ಮೊಬೈಲ್ ಇಲ್ಲದ ಕಾಲವದು.ರಾತ್ರಿ ಊಟ ಮಾಡಿ ಬಂದು ಅಂಗಳದ ಒಂದು ಮೂಲೆಯಲ್ಲಿ ಕೂತು  ಅಣ್ಣ ಹೇಳುತ್ತಿದ್ದ ಕಥೆಗಳನ್ನೆಲ್ಲ ಕೇಳುತ್ತಿದ್ದನಂತೆ. ಅವನಿಗೆ ಇವೆಲ್ಲವೂ ದುಡಿಮೆಯ ಶ್ರಮ ನೀಗಿಸುತ್ತಿದ್ದವೇನೋ. ಪ್ರತಿದಿನ ರಾತ್ರಿ ಬಂದು  ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದ ಅವನನ್ನು ನೋಡಿದ್ದರೂ ನಾವು ಅಷ್ಟು ಗಮನ ಕೊಟ್ಟಿರಲಿಲ್ಲ. ಹಾಗೆ ಒಂದಿಬ್ಬರು ಬಂದು ಕುಳಿತುಕೊಳ್ಳುತ್ತಿದ್ದರು. ಅಣ್ಣನಿಗೆ ಸಂಭ್ರಮಾಶ್ಚರ್ಯ. ಅಂದಿನಿಂದ ಅಣ್ಣ ಅವನನ್ನೂ ಉದ್ದೇಶಿಸಿ ಕಥೆ ಹೇಳಲಾರಂಭಿಸಿದರು.

 ನಾವು ಆ ಊರಿನಲ್ಲಿ ಇರುವಷ್ಟು ದಿನವೂ ಅಣ್ಣ ಅವನಿಗೆ ಪದ್ಯಗಳ ಬಗ್ಗೆ, ರೂಪಕಗಳ ಬಗ್ಗೆ ಹೇಳುತ್ತಲೇ ಇದ್ದರು. ಮೊನ್ನೆ ಮೊನ್ನೆ ನಾನು ಆ ಊರಿಗೆ ಹೋದಾಗ ಸಿಕ್ಕವನನ್ನು ಇದರ ಬಗ್ಗೆ ಕೇಳಿದೆ. ಅವನು ಪದ್ಯ ಬರೆಯುವುದನ್ನು ಮಾತ್ರ ಬಿಟ್ಟಿದ್ದ. ಓದುವುದನ್ನು ನಿಲ್ಲಿಸಿರಲಿಲ್ಲ. ತುಂಬಾ ಓದಿಕೊಂಡಿದ್ದ. ಬರೆಯಬಾರದೇಕೆ ಎಂದಾಗ ಅವನು ಹೇಳಿದ್ದು . ಸಮಯ ಸಿಗೋಲ್ಲ .. ಓದೋದ್ರಿಂದ ದಿನದ ಕಷ್ಟ ಗೊತ್ತಾಗೊಲ್ಲ..ಓದದೇ ಇರೋಕೆ ಆಗೋಲ್ಲ. ಬೇಂದ್ರೆಯವರ ಕುಣಿಯೋಣು ಬಾರಾ ಪದ್ಯದ ಬಗ್ಗೆ ಅವನ ಮಾತುಗಳನ್ನು ಕೇಳಿದಾಗ ನನಗೇಕೆ ಹೊಳೆದಿರಲಿಲ್ಲ ಈ ಅಂಶ ಅನ್ನಿಸಿ ಹೋಯಿತು. ಅವನು ಹುಟ್ಟುತ್ತಲೇ ಕಾವ್ಯ ಓದಿಕೊಂಡು ಬಂದವನೇನಲ್ಲ. ತುಂಬಾ ಓದಿದವನೂ ಅಲ್ಲ.ಬಡತನದ ಬವಣೆಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಕಾವ್ಯವನ್ನು ಆಧರಿಸಿದ್ದ.   ಕಾವ್ಯ ಅವನ ಬದುಕಾಗಿಬಿಟ್ಟಿತ್ತು. ಕುಮಾರವ್ಯಾಸನನ್ನೂ ಓದಿಕೊಂಡು ಬಿಟ್ಟಿದ್ದ. ಒಮ್ಮೆ ಕಾವ್ಯ ಒಳಹೊಕ್ಕರೆ ಹೇಗೆ ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಅವನೊಂದು ಜೀವಂತ ಉದಾಹರಣೆಯಾಗಿದ್ದ. 
ಹಿಂದಿನ ಕಾಲದ ದಿನಗಳ ಬಗ್ಗೆ ಓದಿದ್ದು ನೆನಪಾಗುತ್ತಿದೆ. ಬೆಳಬೆಳಗಿನಲ್ಲಿ ಹಾಡುತ್ತಿದ್ದ ಜಾನಪದ ಗೀತೆಗಳು, ಬೀಸುವ ಪದಗಳು , ನೆಟ್ಟಿ ಮಾಡುವಾಗ ಹಾಡಿಕೊಳ್ಳುತ್ತಿದ್ದ ಪದಗಳು ಇವೆಲ್ಲವೂ  ಇಂತಹುದೇ ಶ್ರಮದ ದುಡಿಮೆಗೆ ನೇವರಿಕೆಯಾಗಿತ್ತಾ . ಹಗಲೆಲ್ಲಾ ದುಡಿದು ಮನೆಗೆ ಬಂದು ಸಂಜೆ ಹರಿಕಥೆ, ಗಮಕ , ಯಕ್ಷಗಾನ, ನಾಟಕ ಇಂತಹವುಗಳಲ್ಲಿ ಮೈ ಮರೆಯುತ್ತಿದ್ದುದು ಬದುಕನ್ನು ಸಹನೀಯವನ್ನಾಗಿಸಿಕೊಳ್ಳಲೆಂದಾ? ಕಾವ್ಯವೆಂಬುದು ಈ ಎಲ್ಲಾ ಪ್ರಕಾರಗಳಲ್ಲೂ ಹಂಚಿಹೋಗಿರುವುದು ಅದು ಬದುಕಿಗೆಷ್ಟು ಪ್ರಸ್ತುತ, ಅವಶ್ಯಕ ಎಂದು ಸೂಚಿಸುತ್ತಿದೆಯಾ?

ಮೊನ್ನೆ ಮೊನ್ನೆಯಷ್ಟೇ ಅಡಿಗರ ಕವನಗಳು ಅರ್ಥವಾಗುವುದಿಲ್ಲ... ಅದರ ಬಗ್ಗೆ ಒಂದಿಷ್ಟು ಹೇಳಿ ಎಂದೊಬ್ಬರು ಕೇಳಿದರು. ಒಂದು ಪ್ರವೇಶಿಕೆ ಕಾವ್ಯಕ್ಕೆ ಅಗತ್ಯವೂ ಹೌದಾದರೂ ಕಾವ್ಯೋಪಾಸನೆ ಅದೊಂದು ಮನಸ್ಥಿತಿ. ಅರ್ಥ ಮಾಡಿಕೊಳ್ಳುತ್ತಾ ಆಸ್ವಾದಿಸುವ  ಪಯಣ. ಅಲ್ಲಿ ಪಯಣ ಮಾತ್ರ ಮುಖ್ಯ. ಗಮ್ಯ ನಗಣ್ಯ. ಹಿಂದೊಮ್ಮೆ ಒಬ್ಬರು ಹೇಳಿದ್ದರು ಸರಳವಾಗಿ ಅರ್ಥವಾಗದ ಯಾವುದನ್ನಾದರೂ ನಾವು ಓದಬೇಕೇಕೆ ಎಂದು. ಕಾವ್ಯ ನಮ್ಮ ಜೀವನಕ್ಕೇಕೆ ಬೇಕು ಅದನ್ನು ಓದುವ ಅನಿವಾರ್ಯತೆಯ ಕುರಿತು ಈಗಲೂ ಅಂತಹವರಿಗೆ ಮನದಟ್ಟು ಮಾಡಲಾಗುವುದಿಲ್ಲ ಜೊತೆಗೆ ಮಾಡುವುದೂ ಅನಿವಾರ್ಯವೇನಲ್ಲ ಎಂಬ ಅರಿವೂ.
 
ಕಾವ್ಯಾಸಕ್ತ ಮನಸ್ಸುಗಳು ಈಗಲೂ ಮೂಲೆಯಲ್ಲಿ ಕೂತಾದರೂ ಸರಿ ತಲ್ಲೀನವಾಗಿ ಕಾವ್ಯವನ್ನು ಆಸ್ವಾದಿಸುತ್ತಲೇ ಇರುತ್ತವೆ.ಬದುಕಿನ ತಲ್ಲಣಗಳನ್ನು ತನ್ಮೂಲಕ ಹಗುರವಾಗಿಸಿಕೊಳ್ಳುತ್ತಲೇ ಇರುತ್ತವೆ.

No comments:

Post a Comment