Thursday, 29 March 2018

ಸಂಕ್ರಾಂತಿ






ಇದು ಅಂತಿಂತಹ ಹಬ್ಬವಲ್ಲ .. ಈ ಹಬ್ಬಕ್ಕೋಸ್ಕರ ಸೂರ್ಯನೂ ಕಾಯ್ತಿರ್ತಾನೆ ದಿಕ್ಕು ಬದಲಿಸೋಕೆ ಎಂದು ಅಣ್ಣ ಹೇಳ್ತಿದ್ದರೆ ನಮ್ಮ ಕಣ್ಣುಗಳು ಬೆರಗಿನಿಂದ ಮತ್ತೂ ಅಗಲವಾಗುತ್ತಿತ್ತು. ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದು ಓದಿದ್ದ ಕೇಳಿದ್ದ ನಮಗೆ ಅವನು ದಿಕ್ಕು ಬದಲಿಸುವ ವಿಷಯ ಕೇಳಿದಾಗ ಇನ್ನು ಮುಂದೆ ಪರೀಕ್ಷೆಯಲ್ಲಿ ಅವನು ಹುಟ್ಟುವ ದಿಕ್ಕು ಯಾವುದೆಂದು ಬರೆಯುವುದು ಎಂಬ ಗೊಂದಲ ತೋಡಿಕೊಂಡಾಗ ಅಣ್ಣ ಜೋರಾಗಿ ನಕ್ಕು ಹೇಳಿದ್ದರು . ಸೂರ್ಯ ಪೂರ್ವದಲ್ಲೇ ಹುಟ್ಟಿ ಪಶ್ಚಿಮದಲ್ಲೇ ಮುಳುಗುವುದು ವರ್ಷಕ್ಕೆ ಎರಡೇ ದಿನ ಮಾತ್ರ. ಪ್ರತಿದಿನ ಅವನು ಪೂರ್ವದ ಬಲಕ್ಕೆ ಅಥವಾ ಎಡಕ್ಕೆ ಚಲಿಸುತ್ತಲೇ ಇರುತ್ತಾನೆ. ಎಡಕ್ಕೆ ಚಲಿಸುವಾಗ ದಕ್ಷಿಣಾಯಣ .. ಬಲಕ್ಕೆ ಚಲಿಸಿದರೆ ಉತ್ತರಾಯಣ .. ಎಡಕ್ಕೆ ಚಲಿಸಿದಾಗ ಚಳಿ , ಕತ್ತಲು ಹೆಚ್ಚು... ಬಲಕ್ಕೆ ಚಲಿಸಿದಾಗ ಬೆಳಕು.. ಬಿಸಿಲು ಹೆಚ್ಚು. . ಉತ್ತರಾಯಣದ ಮೊದಲ ದಿನ ಮಕರ ಸಂಕ್ರಮಣ .. ದಕ್ಷಿಣಾಯನದ ಮೊದಲ ದಿನ ಕರ್ಕಾಟಕ ಸಂಕ್ರಮಣ .. " ಪರೀಕ್ಷೆಯಲ್ಲಿ ಪೂರ್ವ ಎಂದೇ ಬರೆಯಬೇಕು ಎಂಬ ವಿಷಯವಷ್ಟೇ ನಮಗೆ ಮುಖ್ಯವಾದ್ದರಿಂದ ಮಿಕ್ಕೆ ವಿಷಯಗಳ ಬಗ್ಗೆ ಎಳ್ಳಷ್ಟೂ ಗಮನಿಸದೇ ಅಮ್ಮ ಬೆರೆಸುತ್ತಿದ್ದ ಎಳ್ಳುಬೆಲ್ಲದ ಕಡೆ ಓಡಿದೆವು. ತಿಂಗಳಿಂದ ತಯಾರಿ ಮಾಡಿದ್ದೆಲ್ಲವನ್ನೂ ಅಮ್ಮ ಪುಟ್ಟ ಪುಟ್ಟ ಕಾಗದದ ಪೊಟ್ಟಣಗಳಲ್ಲಿ ತುಂಬುತ್ತಿದ್ದರು. ಜೊತೆಗೆ ಸಕ್ಕರೆ ಅಚ್ಚು. ನಾವು ಓಡಿಹೋದಾಗ ಅಮ್ಮನಿಗೆ ಆತಂಕ ಅಷ್ಟೂ ದಿನಗಳ ಶ್ರಮ ಮಣ್ಣುಪಾಲಾದರೆ ಎಂದು .."ನಾಳೆ ನೈವೇದ್ಯ ಆದ ಮೇಲೆ ನಿಮಗೆ. ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಬೇಕಲ್ಲವಾ" ಎಂದು ಹೇಳಿ ದೂರ ಕಳಿಸುತ್ತಿದ್ದರು. ಅದನ್ನು ತಿನ್ನದಿದ್ದರೆ ನಾವು ಒಳ್ಳೆಯ ಮಾತೆ ಆಡುವುದಿಲ್ಲವೇನೋ ಎಂಬ ಹೆದರಿಕೆಯಲ್ಲಿ .. ಎಳ್ಳು ತಿನ್ನುವ ಸಂಭ್ರಮದಲ್ಲಿ ಸಂಕ್ರಾಂತಿಯ ಬೆಳಗಿಗೆ ಕಾಯುತ್ತಿದ್ದೆವು.

ಹೌದು ..ಈ ಹಬ್ಬವೇ ಹಾಗೆ. ಎಲ್ಲ ಹಬ್ಬಗಳ ಹಾಗಲ್ಲ .. ಮಿಕ್ಕ ಹಬ್ಬಗಳಿಗೆರಡು ದಿನದ ತಯಾರಿ ಸಾಕೇಸಾಕು. ಸಂಕ್ರಾಂತಿಗೆ ಬರೋಬ್ಬರಿ ಹದಿನೈದು ದಿನಗಳೇ ಬೇಕು. ಅಣ್ಣ ಅಂಗಡಿಯಿಂದ ಬಿಳಿ ಅಚ್ಚುಬೆಲ್ಲವೇ ಬೇಕು ಎಂದು ಆರಿಸಿ ತರುತ್ತಿದ್ದನ್ನು ಅಮ್ಮ ಸಣ್ಣಸಣ್ಣ ಚೌಕಾಕೃತಿಯ ತುಂಡುಗಳಾಗಿ ಕತ್ತರಿಸುತ್ತಿದ್ದರು. ಕೊಬ್ಬರಿಯ ಕಪ್ಪುಸಿಪ್ಪೆ ಕೆತ್ತಿ ಒಗೆದು ಬೆಲ್ಲದ ಚೂರುಗಳ ಗಾತ್ರದಷ್ಟೇ ಸಣ್ಣಗೆ ಹೆಚ್ಚಿಟ್ಟ ಮೇಲೆ ಹುರಿಗಡಲೆಯನ್ನು ಆರಿಸುವ ಸಂಭ್ರಮ.. ನೆಲಗಡಲೆಯನ್ನು ಕಪ್ಪಾಗದಂತೆ ಮರಳಿನ ಜೊತೆ ಹುರಿದು ಸಿಪ್ಪೆ ತೆಗೆದು ಮೊರದಲ್ಲಿ ಕೇರಿ ಚೊಕ್ಕಮಾಡಿ .. ಕಪ್ಪು ಎಳ್ಳು ನೆನೆಸಿಟ್ಟು ಉಜ್ಜಿ ಸಿಪ್ಪೆ ತೆಗೆದು ನೆರಳಿನಲ್ಲಿ ಒಣಗಿಸಿ .. ಅವೆಲ್ಲವನ್ನೂ ಬೆರೆಸಿಟ್ಟು ಬೇಕಿದ್ದರೆ ಬಣ್ಣದ ಸಕ್ಕರೆ ಕಾಳುಗಳನ್ನೂ ಸೇರಿಸಿದರೆ ಅಲ್ಲಿಗೆ ಕೆಲಸ ಮುಗಿದುಬಿಡುವುದಿಲ್ಲ . ಸಕ್ಕರೆ ಅಚ್ಚು ಮಾಡುವ ಧಾವಂತ .. ಹದಿನೈದು ದಿನಗಳು ಹೇಗೆ ಹಾರಿಹೋಗುತ್ತಿದ್ದವೋ ..ಇಷ್ಟೆಲ್ಲಾ ಕಾಳಜಿ ವಹಿಸಿ ಮಾಡಿದ ಎಳ್ಳುಬೆಲ್ಲವನ್ನು ಎಲ್ಲರ ಮನೆಗೆ ಹಂಚಿದಾಗ ಆಡುವ  ಮಾಮೂಲಿಯ ಮಾತು "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ". 
ಈ ಹಬ್ಬಕ್ಕೆ ತಯಾರಿ ನಡೆಸುವಾಗ ಹಳೆಯ ಎಲ್ಲ ಸಡಗರ ನೆನಪಾಗಿ ಮನಸ್ಸಿಗೆ ಪಿಚ್ಚೆನ್ನಿಸಿತು..ಅಂಗಡಿಯಲ್ಲಿ ಎಳ್ಳು ಬೆಲ್ಲ ಸಿದ್ಧ ರೂಪದಲ್ಲಿ ಸಿಕ್ಕುತ್ತಿದೆ. ತಯಾರಿ ಎಂದರೆ ಅಂಗಡಿಗೆ ಹೋಗಿ ಕೊಳ್ಳಲು ಅರ್ಧ ದಿನ ಬಿಡುವು ಮಾಡಿಕೊಳ್ಳುವುದು ಮಾತ್ರ. . ತಂದಿದ್ದನ್ನು ಹಂಚುವಾಗ ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಿ ಎನ್ನುವಾಗ ನನ್ನ ದನಿಯಲ್ಲೇ ಕೃತಕತೆ ಇದೆಯೇನೋ ಎನ್ನಿಸಿ ಸುಮ್ಮನೆ ಅವರ ಕೈಗೊಪ್ಪಿಸಿ ಬಂದುಬಿಡುತ್ತೇನೆ. 
ಒಳ್ಳೆಯ ಮಾತಾಡಿ ಎಂದು ಯಾರಲ್ಲಿ ಹೇಳುವುದು ? ಎಲ್ಲಿ ಮಾತನಾಡಬೇಕು ಒಳ್ಳೆಯ ಮಾತುಗಳನ್ನು? ಜಡಗಟ್ಟಿದ ನಾಲಿಗೆಗೆ ಎಳ್ಳಿನ ಬೆಲ್ಲದ ಸಿಹಿಯಾದ ಬೆಚ್ಚಗಿನ ಸ್ಪರ್ಶ ಸಿಕ್ಕು ಎದುರಿರುವವರೊಡನೆ ಒಳ್ಳೆಯ ಮಾತಾಡುವಿಕೆಗೆ ನಾಂದಿಯಾಗುತ್ತದೆ ಎಂಬ ಆಶಯ ನಂಬಿಕೆ .. ಒಳ್ಳೆಯ ಮಾತುಗಳು ನಮ್ಮ ಬಾಯಿಂದಷ್ಟೇ ಹೊಮ್ಮಬೇಕೆ? ಅಷ್ಟಕ್ಕೇ ಸೀಮಿತವಾಗಿದೆಯಾ ಮಾತುಗಳೆಂಬ ಮಾತುಗಳು? ಇಷ್ಟಕ್ಕೂ ನಾವು ಎದುರಿರುವವರ ಜೊತೆಗೆಷ್ಟು ಮಾತನಾಡುತ್ತೇವೆ? ಈಗ ಹತ್ತಿರದ ಸಂಬಂಧಗಳನ್ನೂ ಸಾಮಾಜಿಕ ಜಾಲತಾಣಗಳಲ್ಲೇ ಭೇಟಿಯಾಗುವ ಅಲ್ಲೇ ಮಾತನಾಡಿ ಮುಗಿಸುವ ಎದುರು ಸಿಕ್ಕಾಗ ಮೊಬೈಲಿನಲ್ಲಿಯೇ ಮಗ್ನರಾಗಿ ಮಾತು ಮರೆತಂತಾಡುವ ನಾವು ಒಳ್ಳೆಯ ಮಾತಾಡುವುದು ಹೇಗೆ? 
ಮಾತು.. ಮಾತು..ಮಾತು.. ಎಲ್ಲಿ ನೋಡಿದರೂ ಬರೀ ಮಾತು.. ಇಲ್ಲಿ "ನೋಡಿದರೂ" ಎಂಬ ಪದವನ್ನು ಉದ್ದೇಶಪೂರ್ವಕವಾಗಿಯೇ ಬಳಸುತ್ತಿದ್ದೇನೆ.. ಮಾತುಗಳನ್ನು ಜಾಲತಾಣಗಳಲ್ಲಿ ನೋಡುವ ಕಾಲ ಇದು .. ಎಲ್ಲರಿಗೂ ಎಲ್ಲವನ್ನೂ ಚರ್ಚಿಸುವ ಹಂಬಲ .. ಎಲ್ಲದರ ಬಗ್ಗೆಯೂ ಮಾತನಾಡುವ ಹಪಾಹಪಿ. ಇಷ್ಟವಿರಲಿ ಇಲ್ಲದಿರಲಿ ಅವರೆಲ್ಲರ ಅಭಿಪ್ರಾಯ ನೀವು ಓದಬೇಕು.. ಅದಕ್ಕೆ ಪ್ರತಿಕ್ರಿಯಿಸಬೇಕು . ಇಲ್ಲವಾದರೆ ನಿಮಗೆ ಸಾಮಾಜಿಕ ಬದ್ಧತೆಯಿಲ್ಲ ಎಂಬ ಹಣೆಪಟ್ಟಿ ಸಿದ್ಧವಾಗಿರುತ್ತದೆ. ನಿಮ್ಮ ನಿಲುವನ್ನು ವ್ಯಕ್ತಪಡಿಸಿ ಎನ್ನುತ್ತಾರೆ. ಯಾರಿಗೂ ಯಾರಿಗೆ ನೋವಾಗುತ್ತದೆಯಾ ಎಂಬ ಯೋಚನೆಯಿಲ್ಲ. ತಾನು ನೇರ ನಿಷ್ಠುರ ಎಂದು ಹೇಳಿಕೊಳ್ಳುವುದು ಹೆಚ್ಚುಗಾರಿಕೆಯಾಗಿದೆ.ಯಾರಿಗಾದರೂ ಅದರಿಂದ ನೋವಾದರೆ ತಾನು ಅಸಹಾಯಕ/ಕಿ ಎಂಬ ಉಡಾಫೆ. ಎಡ ಬಲ ಪಂಥಾಹ್ವಾನ ..ಇರುವ ಎಲ್ಲರನ್ನೂ ಯಾವುದಾದರೊಂದು ಕಡೆ ಗುರುತಿಸುವ ಅಥವಾ ಅವರನ್ನು ತಮ್ಮ ಗುಂಪಿಗೆ ಎಳೆದುಕೊಳ್ಳುವ ಧಾವಂತ .. ತಾನು ಯಾರಿಗೂ ಸೇರದವ ಎಂದರೆ ಮುಲಾಜಿಲ್ಲದೆ ಆಷಾಡಭೂತಿ.. ಸೋಗಲಾಡಿ ..ಸಮಯಸಾಧಕನೆಂಬ ಪಟ್ಟ. ಎಲ್ಲರಿಗೂ ಅವರವರದೇ ಮಾತು ಅಂತಿಮ ಎಂಬ ಹುಂಬತನ.. ಯಾರಲ್ಲಿ ಹೇಳುವುದು ? ಎಷ್ಟು ಜನಕ್ಕೆ ಹಂಚುವುದು ಎಳ್ಳುಬೆಲ್ಲ ? ಒಳ್ಳೆಯ ಮಾತಾಡಲು !!!...ಇಷ್ಟಕ್ಕೂ ಒಳ್ಳೆಯ ಮಾತೆಂದರೆ ಏನು? ಎದುರಿರುವವರ ಮೆಚ್ಚಿಸಲು ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಮ್ಮನೆ ಗಿಲೀಟು ಮಾತನಾಡುವುದಾ? ಅಥವಾ ಸುಖಾಸುಮ್ಮನೆ ಹೊಗಳಿ ಅಟ್ಟಕ್ಕೇರಿಸುವುದಾ? ಒಳ್ಳೆಯ ಮಾತನಾಡಬೇಕು ಎಂಬ ಭ್ರಮೆಯಲ್ಲಿ ಎಲ್ಲರಿಗೂ ಒಳ್ಳೆಯವನಾಗಲು ಹೊರಟು ಕೃತಕವಾಗಿ ಬದುಕುವುದಾ ? ಒಳ್ಳೆಯ ಮಾತು ಎಂದರೆ ಏನು?
ಟ್ವಿಟ್ಟರ್ ವಾರ್ ಕಾಲ ಇದು .. ಯಾರೋ ನಟ ಮತ್ಯಾರೋ ನಟನ ಬಗ್ಗೆ ಮಾತನಾಡುತ್ತಾನೆ.. ಅತ್ತ ಕಡೆಯ ಪ್ರತಿಕ್ರಿಯೆ ಇನ್ನೂ ಉಗ್ರವಾಗಿರುತ್ತದೆ. ರಾಂಗೋಪಾಲ್ ವರ್ಮನಂತಹ ಸೆನ್ಸಿಬಲ್ ನಿರ್ದೇಶಕ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಟ್ವೀಟ್ ಮಾಡುತ್ತಾರೆ. ಟ್ವಿಟ್ಟರ್ಗಳಲ್ಲಿ , ತರೂರರ ಟ್ವೀಟ್ ಎಷ್ಟೋ ಬಾರಿ ಹಾಸ್ಯಾಸ್ಪದವಾಗಿದೆ.. ರಾಜಕೀಯ ಧುರೀಣರಂತೂ ಸಾಮಾಜಿಕ ಜಾಲತಾಣಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ.. ಟ್ವಿಟ್ಟರ್  ಫೇಸ್ ಬುಕ್ಕಿನಂತಹಾ ಜಾಲತಾಣಗಳಲ್ಲಿ  ಎಲ್ಲರೂ ತಂತಮ್ಮ ವಕೀಲರಂತೆ ವರ್ತಿಸುತ್ತಾ ತಾವೇ ನ್ಯಾಯಾಧೀಶರುಗಳೂ ಆಗಿಬಿಡುತ್ತಾರೆ.. ಸತ್ಯಕ್ಕೆ ಮತ್ತೊಂದು ಮಗ್ಗುಲು ಇರಬಹುದಾ ಯೋಚಿಸಲೂ ಹೋಗುವುದಿಲ್ಲ. ತಮ್ಮ ಮಾತು ಸರಿ ಎಂದು ಜನರನ್ನು ಒಪ್ಪಿಸುವ ಹಪಾಹಪಿಯೇ ಹೊರತು ಸರಿಯಾದ್ದನ್ನು ಗುರುತಿಸುವ ಒಪ್ಪಿಕೊಳ್ಳುವ ಮನಸ್ಥಿತಿ ಯಾರಲ್ಲೂ ಇಲ್ಲ.  ಅಮೆರಿಕಾದ ಟ್ರಂಪ್  ಉತ್ತರ ಕೊರಿಯಾದ ಕಿಮ್ ಇಬ್ಬರೂ ಸಣ್ಣ ಮಕ್ಕಳಿಗಿಂತಲೂ ಕಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಡೆದಾಡಿಕೊಂಡಿದ್ದು .. ಸೈದ್ಧಾಂತಿಕ ರಾಜಕಾರಣದಿಂದ ವೈಯಕ್ತಿಕ ಮಟ್ಟದ ಕೀಳು ಅಭಿರುಚಿಯ ಟೀಕೆಗಳನ್ನು ಬೇಕಾಬಿಟ್ಟಿ ಒಗೆದದ್ದು ಈ ಶತಮಾನದ ಕೆಟ್ಟ ತಮಾಷೆಗಳಲ್ಲೊಂದು . ಮುದುಕನೆಂಬ ಟೀಕೆ ಅದಕ್ಕೆ ಕುಳ್ಳ ಡುಮ್ಮಎಂಬ ಪ್ರತಿಕ್ರಿಯೆ ಇದೆಂತಹ ಲಜ್ಜೆಗೇಡಿತನ ಎಂದು ಹುಬ್ಬೇರಿಸುವಂತಾಯಿತು. ಒಳ್ಳೆಯ ಮಾತೆಂದರೆ ಏನು? 
ಎಲ್ಲರಿಗೂ ಮಾತನಾಡುವ ಚಪಲ.. ತಕ್ಷಣಕ್ಕೆ ತನ್ನದೊಂದು ಪ್ರತಿಕ್ರಿಯೆ ದಾಖಲಿಸುವ ಹಂಬಲ .. ಯಾರನ್ನೋ ಬಂಧಿಸಿಬಿಟ್ಟರೆ ಅವನು ಅಪರಾಧಿ/ ನಿರಪರಾಧಿ ಎಂದು ತಾವೇ ತೀರ್ಮಾನಿಸಿಬಿಡುವ ಹುಂಬತನ.. ಕಾಯುವ ತಾಳ್ಮೆ ಸತ್ತುಹೋಗಿದೆ.. ತಕ್ಷಣದ ಆವೇಶದಲ್ಲಿ ಏನೋ ಬರೆದು ಒಗೆದು ಸ್ವಲ್ಪ ಹೊತ್ತಿನ ಮೇಲೆ ತಪ್ಪಿನ ಅರಿವಾಗಿ ಅದನ್ನು ಡಿಲೀಟ್ ಮಾಡಿಬಿಟ್ಟರೆ ಮುಗಿದುಹೋಗುವುದಿಲ್ಲ. ಅಷ್ಟರಲ್ಲೇ ಸ್ಕ್ರೀನ್ಶಾಟ್ ವೀರರು ವಿಜೃಂಭಿಸಿರುತ್ತಾರೆ. ಇವರ ಅವಿವೇಕದ ಮಾತುಗಳು ಸ್ಕ್ರೀನ್ ಶಾಟ್ ರೂಪದಲ್ಲಿ ಎಲ್ಲಡೆ ಹರಿದಾಡುತ್ತಾ ಮಾನ ಹರಾಜಿಗಿಡುತ್ತಿರುತ್ತವೆ. ತನ್ನ ಮಾತಿನಿಂದ ಹಿಂತೆಗೆದು ಕೊಳ್ಳುವ ಪ್ರಶ್ನೆಯೇ ಇಲ್ಲ. 
ಏಕೆ ಯೋಚಿಸುವುದಿಲ್ಲ? ಪ್ರತಿಕ್ರಿಯೆ ಹಾಕುವಾಗ ... ಮಾತನಾಡುವಾಗ ಮುಂದಿನ ಪರಿಣಾಮದ ಬಗ್ಗೆ .. ಅದು ತನ್ನ ವ್ಯಕ್ತಿತ್ವವನ್ನೇ ಹೇಳುತ್ತಿರುತ್ತದೆ ಎಂಬ ಬಗ್ಗೆ ಏಕೆ ಗಮನ ಹರಿಸುವುದಿಲ್ಲ ? ಮಾತು ಆಡಿದರೆ ಹೋಯಿತು ಎಂಬ ಮಾತು ಇಂದು ಎಂದಿಗಿಂತಲೂ ಪ್ರಸ್ತುತವಾಗಿದೆ.ಮಾತು ಆಡಿದ ಮೇಲೆ ಎಲ್ಲಿಗೂ ಹೋಗುವುದಿಲ್ಲ.. ಅದು ನಮ್ಮನ್ನೇ ಸುತ್ತುತ್ತಿರುತ್ತದೆ..ನಮ್ಮ ಬಲಿ ಬೇಡುತ್ತಿರುತ್ತದೆ.
ಒಳ್ಳೆಯ ಮಾತೆಂದರೆ ಓಲೈಸುವುದಲ್ಲ .. ಸೈದ್ಧಾಂತಿಕವಾಗಿ ಕರ್ಮಠರಂತೆ ವರ್ತಿಸುತ್ತಾ ತಮ್ಮ ಸಿದ್ಧಾಂತಗಳನ್ನು ಒಪ್ಪಿಕೊಳ್ಳದಿದ್ದರೆ ಅಂತಹವರ ಜನ್ಮವೇ ಕೀಳು ಎಂಬಂತೆ ದೂರುವುದಲ್ಲ. ಅವರವರ ಸಿದ್ಧಾಂತಗಳ ಗುಣಗಳ ಬಗ್ಗೆ ಹೇಳುವುದಕ್ಕಿಂತ ಮತ್ತೊಬ್ಬರ ಸಿದ್ಧಾಂತದ ಅವಗುಣಗಳ ಪಟ್ಟಿ ತಯಾರಿಸುವುದಲ್ಲ.ಇಂದು ಅಗತ್ಯವಿರುವುದು ಮುಕ್ತ ಮನಸ್ಥಿತಿ.. ತನ್ನ ನಿಲುವಿನಷ್ಟೇ ಮತ್ತೊಬ್ಬನ ನಿಲುವನ್ನು ಗೌರವಿಸುವ ಮನಸ್ಥಿತಿ .. ತನ್ನ ಸತ್ಯವನ್ನೂ ಮೀರಿ ಮತ್ತೊಂದೇನೋ ಇರಬಹುದೆಂದು ಒಪ್ಪಿಕೊಳ್ಳುವ ಮನಸ್ಥಿತಿ.. ತನ್ನ ನಿಲುವು ಇದು ಎಂದು ಮತ್ತೊಬ್ಬನಿಗೆ ನೋವಾಗದಂತೆ ಹೇಳುವ ಮನಸ್ಥಿತಿ.. 
ಜೊತೆ ಜೊತೆಗೆ ತನ್ನ ಕಾರ್ಯಕ್ಷೇತ್ರ .. ತನ್ನ ಅರಿವಿನ ಕ್ಷೇತ್ರ ಯಾವುದೆಂದು ಸ್ಪಷ್ಟವಾಗಿ ಗುರುತಿಸುವ.. ಅಗತ್ಯವಿದ್ದ ಜಾಗದಲ್ಲಷ್ಟೇ ಮಾತನಾಡುವ .. ಅಗತ್ಯವಿಲ್ಲದ ಜಾಗದಲ್ಲಿ ಮೌನವಾಗಿರುವುದು ಕೂಡಾ ಬಹಳ ಒಳ್ಳೆಯ ಮಾತೇ ಎಂಬ ತಿಳುವಳಿಕೆ ಇಂದು ಹಿಂದೆಂದಿಗಿಂತಲೂ ಅವಶ್ಯವಾಗಿದೆ.  
 
ಇದು ಸುಗ್ಗಿಯ ಹಬ್ಬ .. ಬೆಳೆದ ಬೆಳೆಗಳೆಲ್ಲ ಕೈಗೆ ಬಂದ ಸಂಭ್ರಮದ ಹಬ್ಬ.ಸುಗ್ಗಿಯ ಸಡಗರ .. ಬೆಳೆದದ್ದೆಲ್ಲವನ್ನೂ ಹಂಚಿತಿನ್ನುವ ಸಡಗರ.. ಪ್ರಕೃತಿ ನೀಡಿದ ಕೊಡುಗೆಯನ್ನು ಹಬ್ಬವಾಗಿಸುವ ಸಡಗರ.. ಕಬ್ಬಿನ ಜಲ್ಲೆ.. ಹಣ್ಣು.. ಪಕ್ಕದ ತಮಿಳುನಾಡಲ್ಲಿ ಪೊಂಗಲಿನ ರೂಪದಲ್ಲಿ ಸಮೃದ್ಧಿಯ ಹಬ್ಬ.. ಒಳ್ಳೆಯದೆಲ್ಲವನ್ನೂ ಹಂಚುವ ಸಂಭ್ರಮ ..ಏನೆಲ್ಲಾ ಹಂಚಿಕೊಳ್ಳುವುದರ ಜೊತೆಗೆ ಒಳ್ಳೆಯ ಮಾತುಗಳನ್ನೂ ಹಂಚೋಣ.. ಒಳ್ಳೆಯ ಮಾತುಗಳನ್ನಾಡುವ ಮನಸ್ಥಿತಿ ಬೆಳೆಸಿಕೊಳ್ಳೋಣ.. ಎಳ್ಳು ಬೆಲ್ಲದ ಸವಿ ಒಳ್ಳೆಯ ಮಾತುಗಳನ್ನಾಡಿಸಲಿ... ಬದುಕು ಹಬ್ಬವಾಗಲಿ.. 

No comments:

Post a Comment