Thursday, 29 March 2018

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ





ಅವಳಿಗೇಕೋ ಎಲ್ಲವೂ ನೆನಪಾಗುತ್ತಿದೆ. ಅವನು ಅವಳ ಜೀವನದಲ್ಲಿ ಬಂದು ಹತ್ತು ವಸಂತಗಳು !!  ಅವನು ಬಂದದ್ದೇ ವಸಂತದಂತೆ.. ಅವಳ ಬದುಕಿನ ವಸಂತವಾಗಿ... ಮತ್ತೂರ ತೇರಿನ ದಿನ ಕಂಡವನು .. ಅವಳ ಅತ್ತಿತ್ತ ಸುಳಿದವನು . ಅವಳು ಕರೆಯಲೆಂದು ಹಂಬಲಿಸಿದವನು .. ಅವಳ ಪತಿ, ಅವಳ ನಲ್ಲ . ಅವರಿಬ್ಬರ ಬದುಕಿಗೀಗ ಹತ್ತು ವರ್ಷಗಳು. 


ಅವನಾದರೂ ಎಂತಹಾ ಪ್ರೇಮಿ . ಕರೆದುಬಿಡು ಬಂದುಬಿಡುವೆನೆಲ್ಲಿಂದಲೆ ಆಗಲಿ, ಬೆಟ್ಟ ಹತ್ತಿ ಹೊಳೆಯ ದಾಟಿ , ಯಾರೆ ನನ್ನ ತಡೆಯಲಿ ಎಂದವನು..ಬಿಸಿಹಾಲಿನ ಬಟ್ಟಲಂತಹಾ ಪ್ರೀತಿಗೆ ಮನಸೋತವನು .. ಮಲ್ಲಿಗೆಯ ಮನಸಿನ ಹುಡುಗಿಯ ಕಂಡು ಮೈ ಮರೆತವನು. ಅವಳೂ ಅಂತಹವಳೇ. ಉಕ್ಕುಕ್ಕಿ ಬರುವ ಭಾವಗಳನ್ನು  ಒಂದು ಕಣ್ಸನ್ನೆಯಲ್ಲಿ, ಹೆಜ್ಜೆಯಿಡುವ ಲಾಸ್ಯದಲ್ಲಿ, ಕೈ ಚಲನೆಯಲ್ಲಿ, ಮಿಂಚುಗಣ್ಣ ತುದಿಯಲ್ಲಿ ಅವನಿಗೆ ದಾಟಿಸುವವಳು.. ಇಂತಹಾ ಇವರಿಬ್ಬರ ಬದುಕಿಗೀಗ ಹತ್ತು ವರ್ಷಗಳು.


ಹತ್ತಿರದ ಹೆಣ್ಣೆಂದು ಅವಳನ್ನು ವರಿಸುವ ಹೊತ್ತು. ಅದು ಊರಿಗೆ ಹತ್ತಿರದ ಹುಡುಗಿಯಾ ಮನಕ್ಕೆ ಹತ್ತಿರವಾದವಳಾ . ಅವನಿಗೆಲ್ಲಿಲ್ಲದ ಸಂಭ್ರಮ. ಇಡೀ ಊರು ಹುಡುಕಿದರೂ ಅವನಿಗೆ ಅವಳಂತಹಾ ಮತ್ತೊಬ್ಬ ಚೆಲುವೆ ಕಣ್ಣಿಗೆ ಬೀಳುತ್ತಿಲ್ಲ. ಹೇಳಿಕೇಳಿ ಅದು ನವಿಲೂರು. ನವಿಲೂರು ಎಂಬ ಹೆಸರಲ್ಲೇ ಅದೆಷ್ಟು ನವಿರುತನ .. ಅಂತಹಾ ಊರಿನಲ್ಲೂ ಇವಳೇ ಚೆಲುವೆ.. ಇವಳೊಬ್ಬಳೇ ಚೆಲುವೆ. ಅವನ ಕನಸಿನ ನೇಯ್ಗೆಗೆ ಇವಳ ಭಾವಗಳೆಳೆಯ ಬಣ್ಣ  .. ಇವಳ ಪ್ರತಿ ಹೆಣಿಗೆಯಲ್ಲೂ ಅವನೇ .. ಅವನೊಬ್ಬನೇ . ಇವಳ ತಟ್ಟೆಯ ತುಂಬಾ ಅನ್ನ ನೊರೆಹಾಲು ತುಂಬಿಸುವ ಬಯಕೆ ಅವನದು.ಅವನ ಬದುಕಿನ ಹಾದಿಯ ಮಲ್ಲಿಗೆಯಲ್ಲಿ ತುಂಬುವ ತುಡಿತ ಇವಳದು.. ಇಂತಹಾ ಕನಸುಗಳ ತೇರೆಳೆದ ಇವರಿಬ್ಬರ ಬದುಕಿಗೀಗ ಹತ್ತು ವರ್ಷಗಳ ಸಂಭ್ರಮ. 

ಅವಳು ಊರಿಗೆ ಹೋದವಳು ಬರುವಾಗ ಕಾತುರ ತಾಳಲಾಗದೇ ಊರ ಬೇಲಿಗೇ ಬಂದವನವನು. ನವಿಲೂರಿಗಿಂತ ಹೊನ್ನೂರೇ ಸುಖವೆಂದು ಕನಸಲ್ಲೂ ನುಡಿವವಳಿವಳ
ಹೇಗಿರಬಹುದು ಇವರಿಬ್ಬರ ಬದುಕು. ಅವಳ ಮುಡಿಯಲ್ಲಿನ್ನೂ ಮಲ್ಲಿಗೆ ನಗುತ್ತಿರಬಹುದಾ? ಪ್ರೀತಿಯೊಂದನೆ ನಿನ್ನ ಬೇಡುವೆನು ನಾನು ಎಂದವನಿಗಿನ್ನೂ ಪ್ರೀತಿಯೇ ಮುಖ್ಯವಾಗಿದೆಯಾ ? ಅವಳೀಗ ಅದನ್ನೆಲ್ಲಾ ಹೇಳುವ ಹೊತ್ತು. ಅವಳದನ್ನು ಅವನಿಗೇ ಹೇಳುತ್ತಿದ್ದಾಳೆ. ಅಥವಾ ಆವನಿಗೆ ಹೇಳುತ್ತಿರುವಂತೆ ಸ್ವಗತವಾಡುತ್ತಿದ್ದಾಳೆ.

ಹತ್ತು ವರ್ಷಗಳು ಬದುಕಿನಲ್ಲೊಂದು ಸ್ಥಿರತೆ ಕೊಟ್ಟಿದೆ, ಮೊದಲಿರುಳ ಹೊಂಗನಸ ಮುನ್ನೀರ ದಾಟಿಸಿದವ ಅಂತಹಾ ಆರಂಭದ ರೋಮಾಂಚನ, ಆಕರ್ಷಣೆಗಳ ಮೀರಿದ ಭಾವಬಂಧುವಾಗಿದ್ದಾನೆ.  ಬಾಗಿಲಿಗೆ ಬಂದು ಬೇಗ ಬಾ ಎಂದವನು ಬಂದುದೇಕೆ ಎಂದೂ ರೇಗಿದ್ದಾನೆ. ನೋಡು ಬಾ ಎಂದವನು ಬೇಡ ಹೋಗು ಎಂದೂ ಮುನಿದಿದ್ದಾನೆ . ತೊತ್ತೆಂದು ಕರೆದನೆಂದು ಕಣ್ಣಲ್ಲಿ ಹನಿ ಮೂಡುವ ಮುನ್ನ ಮುತ್ತೆಂದು ಮುದ್ದಿಸಿ ಹನಿಯಿಂಗಿಸಿದ್ದಾನೆ. ಚಂದಿರನ ಮಗಳೆಂದಿದ್ದಾನೆ ..ಹಾಡಿದ್ದಾನೆ.. ನಕ್ಕು ನಗಿಸಿದ್ದಾನೆ .. ರೇಗಿದ್ದಾನೆ .. ಸಿಟ್ಟಿಗೆದ್ದಿದ್ದಾನೆ . ಜರಿದಿದ್ದಾನೆ.. ಅವಳು ಅದನ್ಯಾವುದನ್ನೂ ದೂರೆಂಬಂತೆ ಹೇಳುತ್ತಿಲ್ಲ.... ಅವಳೊಬ್ಬಳೆ ಮೈಮರೆತು ಮಾತನಾಡಿಕೊಳ್ಳುತ್ತಿದ್ದಾಳೆ.ಕನವರಿಸಿದಂತೆ ..

ಹೌದಾ ? ಹಾಗಾದೀತಾ ನಿಜ ಬದುಕಿನಲ್ಲಿಯೂ ? ಮೊದಲ ದಿನಗಳ ಸಂಭ್ರಮ ಮುಗಿದ ಮೇಲೆ ಯಾರಿದ್ದರೂ ಇಷ್ಟೇ ಅನ್ನಿಸಿ ಬಿಡುತ್ತದೆಯಾ ? ಸತತ ಸಾಂಗತ್ಯ ಏಕತಾನತೆಯಾಗಿ ಬಿಡುತ್ತದೆಯಾ ? ಅವಳ ಹೆಜ್ಜೆ ಅವನೆದೆಯಲ್ಲಿ ಸದ್ದು ಮೂಡಿಸುವುದಿಲ್ಲವಾ ? ಅವಳ ಮಿಂಚುಗಣ್ಣು ಅವನಲ್ಲೀಗ ಪುಳಕ ತರುತ್ತಿಲ್ಲವಾ ? ಅವನ ಒಲವು ಅವಳ ಆದ್ಯತೆಯ ಪಟ್ಟಿಯಲ್ಲಿ ಕೆಳಗಿಳಿಯುತ್ತದೆಯಾ? ಪರಸ್ಪರರ ಜವಾಬ್ದಾರಿಗಳು ಹೆಗಲೇರಿದೆ ಹೊಡೆತಕ್ಕೆ ಎಲ್ಲವೂ ಯಾಂತ್ರಿಕವಾಗಿ ಸಾಗುತ್ತಿದೆಯಾ ? ಯಾರ ಬದುಕೂ ನಿತ್ಯ ನೂತನವಲ್ಲವಾ? ಹಾಗಾದರೆ ಮದುವೆ ಕೊಡುವುದೂ ಪರಸ್ಪರ ಯಾಂತ್ರಿಕ ಹೊಣೆಗಾರಿಕೆಯನ್ನಷ್ಟೇ ಎಂದಾ ? ನಿನ್ನ ಬಲ್ಲವನೆಂದು ನಾನು ನಟಿಸಿದ್ದೇನೆ ; ನನ್ನ ನೀನೂ ಬಲ್ಲೆ ಅಲ್ಲಿಯತನಕ . ಅರಿವುಗಳ ನಡುವೆ ನಾನೂ ನಕ್ಕಿದ್ದೇನೆ ನಿನ್ನ ಜೊತೆಗೇ ಮನೆಯ ಸೂರತನಕ ಎನ್ನುವಲ್ಲಿನ ಭಾವವೇನು? 

ಹತ್ತು ವರ್ಷಗಳಲ್ಲಿ ಕೇವಲ ನಗೆಮಲ್ಲಿಗೆಯೊಂದೇ ಅವರಿಬ್ಬರ ಬದುಕಿನಲ್ಲಿಲ್ಲ. ಅವಳೂ ಒಮ್ಮೊಮ್ಮೆ ಅವನಿರುವ ರೀತಿಗೆ ಮುನಿದಿದ್ದಾಳೆ. ಅವಳ ಮುನಿಸಿಗೆ ಅವನು ಕಲ್ಲು ಬಂಡೆಯಾಗಿಲ್ಲ. ಕೆನ್ನೆಗೆಂಪಿನ ಮೇಲೆ ಕಂಬನಿಯ ತೆರೆಯಿಳಿಸಿ ಚೆಲುವ ಮರೆಮಾಚಲಹುದೇ? ಹೊರನೋಟ ದಿಟವಾಗಿ ಎದೆಯೊಲವೇ ಸಟೆಯಾಗಿ ನಂಬಿಕೆಯೇ ನಲುಗಬಹುದೇ? ಎಂದು ಕೇಳುತ್ತಿದ್ದಾನೆ. ಕನಕಾಂಗಿಯ ಪ್ರೇಮದ ಪರಿ ಬಲ್ಲವನು ಅವನು. ಹಾಗಾಗಿಯೇ ಈ ಸಣ್ಣ ಮಳೆಗೆ ಈ ಕಿರುಗಾಳಿಯಬ್ಬರಕೆ  ಹೆದರುತ್ತಿಲ್ಲ . ಬಿಡದವನನ್ನು ಬಿಡಿಹೋಗಿರೆಂದು ಬೇಡದಿರು ನುಡಿಗೊಡದೆ ನಗದೇ ಕನ್ನಡಿ ಹಿಡಿದು ಕುಳಿತು ಅಲ್ಲೇನು ಹುಡುಕುತಿರುವೆ ಎಂದು ರಮಿಸುತ್ತಿದ್ದಾನೆ. ಬಿಟ್ಟು ಹೋಗುವವಳೇ ಅವಳು? 
ಅವನೂ ಸಿಟ್ಟಿಗೆದ್ದಾಗ ಅವಳೂ ಮುದ್ದಿಸಿದ್ದಾಳೆ. ಕಣ್ಣ ಮರೆಯಾದಾಗ ಹೂವಲ್ಲ ಹಾವೆಂದು ಬಿರುನುಡಿಯನಾಡುವುದು ನಿಮಗೆ ತರವೇ ? ಎಂದು ಪ್ರಶ್ನಿಸುತ್ತಾಳೆ.  ಇರುಳಿನಲಿ ಕಾಣುವುದು ನಿಮ್ಮ ಕನಸೇ ಎಂದು ಮನವರಿಕೆ ಮಾಡಿಕೊಡಲೆತ್ನಿಸುತ್ತಿದ್ದಾಳೆ. ಚುಚ್ಚದಿರಿ ಮೊನೆಯಾದ ಮಾತನೆಸೆದು ಎಂದು ಅವನಿಗೆ ಎಚ್ಚರಿಕೆಯಲ್ಲದ ಎಚ್ಚರಿಕೆ ಕೊಡುತ್ತಿದ್ದಾಳೆ. 
ಅವರಿಬ್ಬರ ಮುನಿಸು, ಕನಸು, ಪ್ರೀತಿ, ದಾಂಪತ್ಯ  ಎಲ್ಲ ಎಲ್ಲವೂ ಈ ಹತ್ತು ವರ್ಷಗಳಲ್ಲಿ ಮಾಗಿದೆ.

 ಆ ದಾಂಪತ್ಯದಲ್ಲಿ ಅವನಿದ್ದ ರೀತಿಯನ್ನು ಅವನ ಪ್ರೀತಿಯನ್ನು ಮುನಿಸನ್ನು ಎಷ್ಟೆಲ್ಲಾ ಬಗೆಯಲ್ಲಿ ವರ್ಣಿಸುವ ಅವಳು ತಾನಿದ್ದ, ಇರುವ ಪರಿಯನ್ನು ಒಂದೇ ವಾಕ್ಯದಲ್ಲಿ ಮುಗಿಸಿಬಿಡುತ್ತಾಳೆ. ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ ಎಂಬ ಮಾತಿನಲ್ಲಿ ಸಕಲವನ್ನೂ ಉಸುರಿ ಬಿಡುತ್ತಾಳೆ ತನಗೆ ತಾನೇ ಹೇಳಿಕೊಳ್ಳುವಂತೆ.. ಹಾಗಾಗಿಯೇ ಅವನು ನೀನೆ ಸಾಕು ಎಂಬ ಮಾತಿನಲ್ಲಿಯೇ ನಿಲ್ಲುವುದಿಲ್ಲ.. ಬೇಕಿದ್ದವಳೂ ನೀನೇ ಎನ್ನುತ್ತಿದ್ದಾನೆ. 

ಬದುಕು ಇಬ್ಬರನ್ನೂ ಹಣ್ಣಾಗಿಸಿದೆ, ಮಾಗಿಸಿದೆ. ನಕ್ಕ ನಗೆಗಳ ಲೆಕ್ಕವೀಗ ಅವರಿಬ್ಬರಲ್ಲೂ ಇಲ್ಲ, ಹುಚ್ಚೆದ್ದ ಬಿರುಗಾಳಿಯೂ ಮನೆಯಲ್ಲಿಲ್ಲ. ಅವನ ಬದುಕಿನಲ್ಲಿ ಪವಾಡದಂತೆ ಬಂದ ಅವಳ ಪ್ರೇಮ, ಅವಳ ಬದುಕಲ್ಲಿ ವಸಂತವಾಗಿ ಬಂದವನ ಒಲವು ಅವರಿಬ್ಬರ ಬದುಕಲ್ಲಿ ಕಾರ್ತೀಕದ ದೀಪದಂತೆ ಬೆಚ್ಚಗೆ ಶಾಂತವಾಗಿ ಉರಿಯುತ್ತಿದೆ. ನೋವಿರದ ನಲಿವಿಲ್ಲವೆಂಬ ಅರಿವು ಇಬ್ಬರಲ್ಲೂ ಮೂಡಿದೆ. ನಗುವಾಗ ನಕ್ಕು ಅಳುವಾಗ ಅತ್ತು  ಪಯಣದಲಿ ಜೊತೆಯಾಗಿ ನಾನಿಲ್ಲವೇ ಎಂಬ ಮಾತು ಮತ್ತೂ ಅರ್ಥ ಪಡೆದು ಕೊಂಡಿದೆ.  ಹತ್ತು ವರ್ಷದ ಬೆಳಕು ಹಾದಿ ತೋರುತ್ತಿದೆ.

No comments:

Post a Comment